ಕರ್ನಾಟಕದ ಜನಪ್ರಿಯ ಜಲಪಾತಗಳು.

ನಮ್ಮ ಕರುನಾಡು ಜಲಪಾತಗಳ ಬೀಡು. ಇಲ್ಲೇ ಹುಟ್ಟಿ, ಇಲ್ಲೇ ವೈಭವದಿಂದ ಹರಿದು ಎಲ್ಲರ ಮನ ಸೆಳೆಯುವ ಇಂತಹ ಜಲಪಾತಗಳ ಬಗ್ಗೆ ಒಂದು ನೋಟ. 
ನನಗೆ ಬಹಳ ಇಷ್ಟವಾದ ಮಾಗೋಡು ಜಲಪಾತದಿಂದ ಈ ಬರಹವನ್ನು ಪ್ರಾರಂಭಿಸುತ್ತಿದ್ದೇನೆ. 

೧: ಭೇಡ್ತಿ ನದಿಯ ರುದ್ರ ನರ್ತನ: ಮಾಗೋಡು ಜಲಪಾತ: (ಚಿತ್ರ ಕೃಪೆ: ಗುರು ದರ್ಶನ).
ಎರಡು ಗುಡ್ಡಗಳ ಮಧ್ಯೆ ಕೆಂಪು ಮಣ್ಣು ಮಿಶ್ರಿತ ಹೊಳೆ, ದಟ್ಟವಾದ ಅರಣ್ಯದಿಂದ ಬಹು ಎತ್ತರದಿಂದ, ರಭಸವಾಗಿ ಜಿಗಿಯುತ್ತದೆ. ಈ ದೃಶ್ಯ ನೋಡಲು ಎರಡು ಕಣ್ಣು ಸಾಲದು. ಪಶ್ಚಿಮ ಘಟ್ಟದ ಒಡ್ಡೋಲಗದಿಂದ ಇಳಿದು ಬರುವ ಜಲಪಾತದ ಸೊಬಗನ್ನು ಸವಿಯಲು ಸಾವಿರಾರು ಜನ ದೂರ ದೂರದಿಂದ ಬರುತ್ತಾರೆ. ಯೆಲ್ಲಾಪುರದಿಂದ ಕೇವಲ ೨೬ ಕಿ.ಮೀ ದೂರದಲ್ಲಿರುವ ಈ ಜಲಪಾತ, ನಮ್ಮ ರಾಜ್ಯದಲ್ಲಿ ಬಹಳ ಜನಪ್ರಿಯ.  


೨: ಶರಾವತಿಯ ಜೋಗ ಜಲಪಾತ: ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ...ಎಂದು ಕವಿ ಡಾ।। ಕೆ.ಎಸ್.ನಿಸಾರ್ ಅಹಮದ್ ತಮ್ಮ ಕವನ ಸಂಕಲನವಾದ ನಿತ್ಯೋತ್ಸವದಲ್ಲಿ ಹೇಳಿರುವುದು ಅತಿಶಯೋಕ್ತಿ ಅಲ್ಲ. ವಿಶ್ವ ವಿಖ್ಯಾತ ಜೋಗ ಜಲಪಾತವು ಎಲ್ಲರ ಮನೆ ಮಾತಾಗಿದ್ದು, ನೋಡಲು ಆಕರ್ಷಕವಾಗಿದೆ. ಮಳೆಯ ಜೊತೆ ಮಂಜೂ ಸೇರಿ, ರಾಜ,ರಾಣಿ, ರೋರೆರ್ ಮತ್ತು ರಾಕೆಟ್, ಅತಿ ಸುಂದರವಾಗಿ ಕಾಣುತ್ತದೆ. ಹಾಲಿನಂತ ಹೊಳೆ, ಸರಿ ಸುಮಾರು ೯೮೦ ಅಡಿ ಎತ್ತರದಿಂದ ಜಿಗಿಯುತ್ತದೆ. ಸಾಗರದಿಂದ ೭೦ ಕಿ.ಮೀ ದೂರದಲ್ಲಿರುವ ಈ ಜಲಪಾತವು ನಮ್ಮ ರಾಜ್ಯದ ಶ್ರೇಷ್ಠ ಪ್ರೇಕ್ಷಣೀಯ ತಾಣಗಳಲ್ಲಿ ಒಂದು.


೩: ಗಗನಚುಕ್ಕಿ-ಭರಚುಕ್ಕಿಯ ರಭಸ: ಬೆಂಗಳೂರುನಿಂದ ಸ್ವಲ್ಪವೇ ದೂರದಲ್ಲಿರುವ ಗಗನಚುಕ್ಕಿ-ಭರಚುಕ್ಕಿ ಜಲಪಾತವು ಕಾವೇರಿಯ ಅವಿಭಾಜ್ಯ ಅಂಗವಾಗಿದೆ. ಕಡಿದಾದ ಗುಡ್ಡಗಳ ಮೇಲಿನಿಂದ ಜಾರುವ ಗಗನಚುಕ್ಕಿ ಮತ್ತು ಬಹಳ ರಭಸದಿಂದ ಧುಮುಕುವ ಭರಚುಕ್ಕಿ ಜಲಪಾತವನ್ನು ನೋಡಲು ನಯನಮನೋಹರವಾಗಿರುತ್ತದೆ. ಈ ಜಲಪಾತಗಳ ಸಹಾಯದಿಂದ ವಿದ್ಯುತ್ ಉತ್ಪಾದನೆ ಕೂಡ ನಡೆಯುತ್ತದೆ. ಇದನ್ನು ಷಿಂಷಾ ಜಲಪಾತವೆಂದೂ ಕರೆಯುತ್ತಾರೆ. 



೪: ಅಬ್ಬಿಯ ಅಬ್ಬರ: ನಮ್ಮ ರಾಜ್ಯದ ಊಟಿ ಎಂದೇ ಕರೆಯಲ್ಪಡುವ ಕೊಡಗಿನಲ್ಲಿ ಸಾಕಷ್ಟು ಜಲಪಾತಗಳಿವೆ. ಕಾವೇರಿಯ ಮಡಿಲಲ್ಲಿ ಇರುವ ಈ ಭಾಗ ಅತ್ಯಂತ ರಮಣೀಯವಾಗಿದ್ದು, ಕಣ್ಮನ ಸೆಳೆಯುತ್ತದೆ. ಹಲವು ವಿಶೇಷತೆಗಳನ್ನು ಹೊಂದಿರುವ ಈ ಪ್ರದೇಶ ಬಹಳ ಪ್ರಸಿದ್ದಿ. ಮಡಿಕೇರಿಯ ಅಬ್ಬಿ ಜಲಪಾತವು ಬಹಳ ವರ್ಷಗಳಿಂದ ಜನರನ್ನು ತನ್ನೆಡೆಗೆ ಸೆಳೆಯುತ್ತಿದೆ. 


೫: ಇರ್ಪುವಿನ ವೈಸಿರಿ: ಕೊಡವಿನವರಿಗೆ ಕಾವೇರಿಯು ತಾಯಿಗೆ ಸಮಾನ. ಅಂತೆಯೇ ಕಾವೇರಿಯ ಭಾಗವಾದ ಲಕ್ಷ್ಮಣ ತೀರ್ಥ ಕೊಡವರಿಗೆ ಪುಣ್ಯಕ್ಷೇತ್ರವೂ ಹೌದು. ಈ ಜಲಪಾತವನ್ನು ಇರ್ಪು ಎಂದು ಕರೆಯುವುದೂ ಉಂಟು. ಬ್ರಹ್ಮಗಿರಿಯ ತುದಿಯಿಂದ ಉದ್ಭವಗೊಂಡು ೩ ಅಂತಸ್ತಿನಿಂದ ಧುಮುಕುವ ಈ ಜಲಪಾತವು ಅತ್ಯಾಕರ್ಷಕ. 


೬: ಮಲ್ಲಳ್ಳಿಯ ಮನಮೋಹಕ ಜಲಪಾತ: ಸೋಮವಾರಪೇಟೆಯಿಂದ ೩೦ ಕಿ.ಮೀ ದೂರದಲ್ಲಿರುವ ಮಲ್ಲಳ್ಳಿ ಜಲಪಾತವು ಪುಷ್ಪಗಿರಿ ಬೆಟ್ಟದಿಂದ ಧುಮುಕಿ ರುದ್ರ ರಮಣೀಯವಾಗಿ ತೋರುತ್ತದೆ. ಕುಮಾರಧಾರ ಎಂಬ ನದಿಯು ಈ ಜಲಪಾತದ ಮೂಲ. ಇದರ ಭೋರ್ಗರೆತವನ್ನು ನೋಡಲು ೯ ಕಿ.ಮೀ ನಡೆದು ಹೋಗಬೇಕು. 


೭: ಹೊಗೇನಕ್ಕಲ್ ಜಲಪಾತ: ಎರಡು ರಾಜ್ಯಗಳನ್ನು ಹಂಚಿಕೊಂಡು ಕಡಿದಾದ ಕಣಿವೆಯಲ್ಲಿ ಅತಿ ಉಗ್ರವಾಗಿ ನಲಿಯುವ ಹೊಗೇನಕ್ಕಲ್ ಜಲಪಾತವು ನೋಡುಗರಿಗೆ ಮುದ ನೀಡುವಂತಾದ್ದು. ಕರ್ನಾಟಕ ಮತ್ತು ತಮಿಳು ನಾಡು ರಾಜ್ಯಗಳ ಮಧ್ಯೆ ಹರಿಯುವ ಈ ನದಿ ಬಹಳ ಸುಳಿಗಳಿಂದ ಕೂಡಿದೆ. 



೮: ಸಾತೊಡ್ಡಿಯ ವಿಹಂಗಮ ನೋಟ: ಸಹ್ಯಾದ್ರಿ ಪರ್ವತ ಶ್ರೇಣಿಯಿಂದ ಉಗಮವಾಗುವ ಹಲವು ಜಲಪಾತಗಳಲ್ಲಿ ಸಾತೊಡ್ಡಿಯೂ ಒಂದು. ಇದರ ನೋಟ ಅದ್ವಿತೀಯ, ಅವರ್ಣನೀಯ..! ಕಾಳಿ ನದಿಯು ತನ್ನ ವೈಭವವನ್ನು ಪ್ರಕೃತಿಯ ಮಡಿಲಲ್ಲಿ ಸವಿಯಲು ಇಡೇ ಮಾಡಿಕೊಟ್ಟಂತ್ತಿದೆ. ಶಿರಸಿಯಿಂದ ೨೬ ಕಿ.ಮೀ ದೂರದಲ್ಲಿರುವ ಈ ಜಲಪಾತ, ಮಳೆಗಾಲದಲ್ಲಿ ನೋಡಲು ತುಂಬಾ ಚೆನ್ನಾಗಿರುತ್ತದೆ. 


೯: ಕಲ್ಲತ್ತಿ ಜಲಪಾತ: ಚಿಕ್ಕಮಗಳೂರು ಬರಿ ಕಾಫಿಗೆ ಸೀಮಿತವಲ್ಲದೆ ಪ್ರಕೃತಿ ಪ್ರೇಕ್ಷಣೀಯ ತಾಣವೂ ಹೌದು. ಇಲ್ಲಿನ ಗಿರಿ-ಶಿಖರಗಳು, ವನ್ಯ ಜೀವಿಗಳ ಸಂತತಿ ಎಲ್ಲರ ಮನ ಸೂರೆಗೊಂಡಿದೆ. ಅದರಲ್ಲಿ ಒಂದಾದ ಕಲ್ಲತ್ಗಿರಿ ಜಲಪಾತವು ಬಹಳ ಹೆಸರುವಾಸಿ. ದೇವರ ಸನ್ನಿಧಾನದಲ್ಲಿ ವಿಜೃಂಭಿಸುವ ಈ ಜಲಪಾತ ಉಮಾ ಮಹೇಶ್ವರರಿಗೆ ಅಭಿಷೇಕ ಮಾಡಿದಂತೆ ತೋರುತ್ತದೆ.


೧೦: ಹಿದ್ಲುಮನೆ ಜಲಪಾತ: ಶಿವಮೊಗ್ಗದ ಕೊಡಚಾದ್ರಿ ಬೆಟ್ಟದ ತಪ್ಪಲಿನಲ್ಲಿ ಒಂದು ಸುಂದರ ತೋಟದ ಮನೆಯ ಒಳಗೆ ಹಾಡು ಹೋದರೆ ಸಿಗುವುದು ಹಿದ್ಲುಮನೆ ಜಲಪಾತ. ಮಳೆಗಾಲದಲ್ಲಿ ಮಾತ್ರ ತನ್ನ ಸೊಬಗನ್ನು ತೋರುವ ಇದು ಬಹಳ ಜನರಿಗೆ ತಿಳಿದಿಲ್ಲ. 


೧೧: ಹನುಮನಗುಂಡಿ ಮತ್ತು ಕಡಂಬಿ ಜಲಪಾತ: ಕುದ್ರೆಮುಖ ರಾಷ್ಟ್ರೀಯ ಉದ್ಯಾನವನವು ಸದಾ ಹಸಿರಲ್ಲಿ ಕಂಗೊಳಿಸುವ ಬೆಟ್ಟ-ಗುಡ್ಡಗಳ ಜೊತೆಗೆ ಜಲಪಾತ-ತೊರೆಗಳನ್ನೂ ಒಳಗೊಂಡಿದೆ. ಅದಿರು ಸರಭಾರಾಜನ್ನು ನಿಲ್ಲಿಸಿದ ಮೇಲೆ, ಈ ಪ್ರದೇಶದವನ್ನು ದಟ್ಟವಾದ ಅರಣ್ಯವು ಆವರಿಸಿದ್ದು, ವನ್ಯಜೀವಿಗಳಿಗೆ ಆಶ್ರಯ ತಾಣವಾಗಿದೆ. ಎಸ್.ಕೆ.ಬಾರ್ಡರ್ ಹಾದಿಯಲ್ಲಿ, ಹೊರನಾಡು ಶ್ರೀಕ್ಷೇತ್ರಕ್ಕೆ ಹೋಗುವಾಗ ಹನುಮನಗುಂಡಿ ಮತ್ತು  ಕಡಂಬಿ ಜಲಪಾತಗಳು ಪ್ರಯಾಣಿಕರನ್ನು ಆಕರ್ಷಿಸುತ್ತದೆ. ಹಾಲಿನ ನೊರೆಯಂತೆ ಕಾಣುವ ಇವೆರಡು ನನಗೆ ಬಹಳ ಅಚ್ಚುಮೆಚ್ಚು.



೧೨: ವಿಭೂತಿ ಜಲಪಾತ: ಇನ್ನು ಕಡೇಯದಾಗಿ, ನಮ್ಮ ರಾಜ್ಯದ ಕಡಲ ತೀರದಲ್ಲೂ ಜಲಪಾತಗಳನ್ನು ಕಾಣಬಹುದು. ಗೋಕರ್ಣ ಹತ್ತಿರ ಇರುವ  ವಿಭೂತಿ ಜಲಪಾತವನ್ನು ತಲುಪಲು ಗುಡ್ಡದ ಮೇಲೆಯೇ ಹಾದು ಹೋಗಬೇಕು. ೪ ಅಂತಸ್ತಿನಿಂದ ಜಿಗಿಯುವ ನದಿಯು, ವಿಭೂತಿಯ ಬಣ್ಣದಿಂದ ಕೂಡಿರುವ ಕಾರಣ ಈ ಜಲಪಾತವನ್ನು ವಿಭೂತಿ ಜಲಪಾತ ಎಂದು ಕರೆಯುತ್ತಾರೆ. ಈ ಜಲಪಾತವು ಗೋಕರ್ಣದಿಂದ ಸುಮ್ಮರು ೧೫ ಕಿ.ಮೀ ದೂರದಲ್ಲಿದೆ.


೧೩: ಅಪ್ಸರಕೊಂಡ: ಹೊನ್ನಾವರದ ರಾಮಚಂದ್ರಾಪುರ ಮಠದ ಹಿಂಭಾಗ ೫೦ ಅಡಿ ಎತ್ತರದಿಂದ ಧುಮುಕುವ ಅಪ್ಸರಕೊಂಡ ಜಲಪಾತವು, ಸಣ್ಣದಾದರೂ ರಮ್ಯವಾಗಿದೆ. ನದಿಯು ತನ್ನ ಗುರಿಯಾದ ಸಮುದ್ರವನ್ನು ಸೇರುವುದಕ್ಕೆ ಮುನ್ನ ಜಲಪಾತದ ಸ್ವರೂಪ ತಾಳುತ್ತದೆ. ಹೊನ್ನಾವರದಿಂದ ೧೧ ಕಿ.ಮೀ ದೂರದಲ್ಲಿ ಈ ರಮಣೀಯ ಜಾಗವು ಸಿಗುವುದು.


ನಮ್ಮ ರಾಜ್ಯದಲ್ಲಿ ಹುಟ್ಟಿ ಮನೋಜ್ಞವಾಗಿ ಹರಿಯುವ ನದಿಗಳಿಗೆ ಪರ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ನಮ್ಮ ರಾಜ್ಯದಲ್ಲಿ ಮಳೆ ಕಮ್ಮಿಯಾಗಿದ್ದು ನೀರಿಲ್ಲದೆ ಜಲಾಶಯಗಳು ಭಣಗುಡುತ್ತಿರುವಾಗ ಅನ್ಯ ರಾಜ್ಯಗಳಿಗೆ ನೀರು ಹಂಚುವುದು ಹೇಗೆ ಸಾಧ್ಯ?
ನೀರಿಲ್ಲದೆ ಜಲಾಶಯಗಳು ಇಲ್ಲ, ನೀರಿಲ್ಲದೆ ಜಲಪಾತಗಳೂ ಇಲ್ಲ. ನಾವೆಲ್ಲರು ಸೇರಿ ನೀರನ್ನು ಮಿತವಾಗಿ ಬಳಸೋಣ.

ಉಳಿದ ಪ್ರಮುಖ ಜಲಪಾತಗಳು:
 ಉಂಚಳ್ಳಿ ಜಲಪಾತ: ಶಿರಸಿಯಿಂದ ೩೦ ಕಿ.ಮೀ ದೂರ. 
ಧೂದ್ ಸಾಗರ ಜಲಪಾತ: ಕಾರವಾರದಿಂದ ೪೦ ಕಿ.ಮೀ ದೂರ. 
ಜೋಗಿಗುಂಡಿ ಮತ್ತು ಬರ್ಖಣ ಜಲಪಾತ: ಆಗುಂಬೆಯಿಂದ ೧೨ ಕಿ.ಮೀ ದೂರ. 
ಚೆಲಾವರ ಜಲಪಾತ: ಮಡಿಕೇರಿಯಿಂದ ೪೦ ಕಿ.ಮೀ. 
ಸಿರಿಮನೆ ಜಲಪಾತ: ಶೃಂಗೇರಿಯಿಂದ ೨೦ ಕಿ.ಮೀ ದೂರ. 

ಇನ್ನೂ ಅನೇಕಾನೇಕ ಸಿರಿ ಜಲಪಾತಗಳು ನಮ್ಮ ರಾಜ್ಯ್ದಲ್ಲಿ ರಾರಾಜಿಸುತ್ತಿವೆ, ನೋಡಲು ಮರೆಯದಿರಿ.

Comments

  1. I wanted to take a moment to thank you for your exceptional travel blog. Your articles are like mini-adventures, transporting me to different parts of the world through your words. Your travel guides are thorough and informative, and your passion for https://www.keralapackage.org/kerala-tour-packages-from-bangalore travel is infectious. I've gained a wealth of knowledge from your blog, and it's my go-to source for trip planning.

    ReplyDelete

Post a Comment

Popular Posts